top of page

Our Recent Posts

Archive

Tags

Search

ಯುದ್ಧ ಕಾಲೇ ಶಸ್ತ್ರಾಭ್ಯಾಸ

  • kannadambalge
  • Sep 30, 2021
  • 1 min read

ಹಿಂದಿನ ಕಾಲದಲ್ಲಿ ರಾಜ ಮನೆತನದವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಯುದ್ಧಕ್ಕೆ ಸಿದ್ಧರಾಗುತ್ತಿದ್ದರು. ಯುದ್ದಕ್ಕೆ ಬೇಕಾಗುವ ಎಲ್ಲಾ ಶಾಸ್ತ್ರ ಯುಕ್ತಿ, ಕ್ರಮ ಪ್ರತಿಭೆಯನ್ನು ಮೈಗೂಡಿಸಿಕೊಳ್ಳುತ್ತಿದ್ದರು. ಒಂದೊಂದು ಸಲ ತಮ್ಮ ಜೀವನದುದ್ದಕ್ಕೂ ಒಂದು ಸಲವೂ ಈ ಯುದ್ಧ ಶಕ್ತಿಯನ್ನು ಪ್ರದರ್ಶಿಸುವ, ತೋರಿಸಿಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ. ಆದರೂ, ಮಗು ಹುಟ್ಟಿದ ತಕ್ಷಣ ಹೆಣ್ಣಾಗಲಿ ಗಂಡಾಗಲಿ ಯುದ್ಧದ ಶಾಸ್ತ್ರವನ್ನು, ಆಯುಧಗಳನ್ನು ಬಳಸುವ ಕಲೆಯನ್ನು ಹೇಳಿಕೊಡುತ್ತಿದ್ದರು. ಎಂದಾದರೂ ಯುದ್ಧದ ಸಂದರ್ಭ ಬಂದರೆ ಉಪಯೋಗಕ್ಕೆ ಬರುತ್ತದೆ ಎನ್ನುವ ಯೋಚನೆ ಅವರದ್ದಾಗಿತ್ತು.

ಈ ಕ್ರಮವನ್ನು ಪಾಲಿಸದೆ ಯುದ್ಧ ಬಂದಾಗ ನೋಡೋಣ ಎಂದು ಭಾವಿಸಿ ಸುಮ್ಮನೆ ಕುಳಿತರೆ ಶತ್ರು ಸೈನ್ಯ ಬಾಗಿಲಿಗೆ ಬಂದಾಗ ರಾಜ ಮತ್ತು ರಾಜಕುಮಾರ ಆಯುಧಗಳ ಬಗ್ಗೆ ತಿಳಿದುಕೊಂಡರೆ, ಕಲಿಯಲು ಪ್ರಾರಂಭಿಸಿದರೆ ಯುದ್ಧ ಮಾಡಲು ಸಾಧ್ಯವೇ? ಯುದ್ಧದಲ್ಲಿ ಜಯಗಳಿಸಲು ಸಾಧ್ಯವೇ? ಆದ್ದರಿಂದಲೇ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬ ಗಾದೆ ಹುಟ್ಟಿಕೊಂಡಿತು.



ನಮ್ಮ ಜೀವನದಲ್ಲಿಯೂ ಶಾಲೆಯ ಶಿಕ್ಷಣದಿಂದ ಹಿಡಿದು ನಮ್ಮ ನಿತ್ಯ ಜೀವನದಲ್ಲಿ ನಾವು ಕಲಿಯುವ ಸಣ್ಣಪುಟ್ಟ ಪಾಠಗಳು ನಮ್ಮ ಜೀವನಕ್ಕೆ ಬೇಕಾಗುವ ಅಂಶವಿರುತ್ತದೆ. ಸಮಯ ಬಂದಾಗ ನೋಡಿಕೊಳ್ಳುತ್ತೇನೆ. ಆಗ ಕಲಿಯುತ್ತೇನೆ. ಆಗ ಹೇಗೆ ಮಾಡುವುದು ಎಂದು ವಿಚಾರಿಸುತ್ತೇನೆ ಎಂದು ಯೋಚಿಸಿ ಇಂದು ಸೋಮಾರಿತನ ಮಾಡಿದರೆ ನಮ್ಮ ಅಪಜಯ ಅಥವಾ ಸೋಲು ಖಂಡಿತ ಎಂಬುದು ಈ ಗಾದೆಯ ಒಳಗುಟ್ಟು. ಜೀವನ ಜೀವನ ಒದಗಿಸುವ ಬೇರೆ ಬೇರೆ ಸವಾಲುಗಳನ್ನು ಎದುರಿಸಲು ನಮ್ಮ ಮುಂದೆ ಬರುವ ಎಲ್ಲಾ ವಿಷಯಗಳನ್ನು ಕಲಿತು ತಯಾರಾಗಿರಬೇಕು. ಇದು ಕೀಳು ಅದು ಮೇಲೆ, ಇದು ಮೇಲು ಅದು ಕೀಳು, ಅದರ ಉಪಯೋಗವಿಲ್ಲ, ಅದರ ಉಪಯೋಗವಾಗುವುದಿಲ್ಲ ಎಂದು ಯೋಚಿಸಿ ಯಾವುದನ್ನು ತ್ಯಜಿಸಬಾರದು.

ನಾವು ಕೊನೆಯ ಗಳಿಗೆಯಲ್ಲಿ ಪರೀಕ್ಷೆಗಳಿಗೆ ಓದುವ ಸಂದರ್ಭದಲ್ಲಿ ಈ ಗಾದೆಯು ಸಮರ್ಪಕವಾಗಿದೆ. ಇನ್ನೇನು ನಾಳೆ ಪರೀಕ್ಷೆ ಇದೆ ಎನ್ನುವಾಗ ಪುಸ್ತಕ ತೆರೆದಿಟ್ಟು ತಲೆ ತಲೆ ಚಚ್ಚಿಕೊಳ್ಳುವ ವಿದ್ಯಾರ್ಥಿಗೆ ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂದು ಹೇಳಬಹುದಾಗಿದೆ.



Comments


Follow us 

  • Facebook

Contact

Address

Bengaluru, Karnataka, India

©2020 by kannadambalge. Proudly created with Wix.com

bottom of page